ಕಲಬುರ್ಗಿ | ಆಯುರ್ವೇದ
ಡಾ.ಅಂಕಿತಾ ಜೋಶಿ ಕಲಬುರ್ಗಿಯವರು. ಬೆಳಗಾವಿಯ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಿಂದ ಆಯುರ್ವೇದ ವೈದ್ಯ ಪದವಿ ಪಡೆದಿದ್ದಾರೆ. ಈ ಕ್ಷೇತ್ರ ಆಯ್ದುಕೊಳ್ಳಲು ಅವರಿಗೆ ಮೂಲ ಪ್ರೇರಣೆ ಶ್ರೀಶ್ರೀ ರವಿಶಂಕರ ಗುರೂಜಿ. ಗುರೂಜಿ ಅವರ ಅಣತಿಯಂತೆಯೇ ಅಂಕಿತಾ ಕೂಡ ದೇಸಿ ವೈದ್ಯ ಪ್ರಕಾರವಾದ ನಾಡಿ ತಪಾಸಣೆಯಲ್ಲಿ ಸಿದ್ಧಹಸ್ತರು.
ಆರಂಭದಲ್ಲಿ ಎನ್ಜಿಒ ಮೂಲಕ ಸೇವೆ ಆರಂಭಿಸಿದ ಅವರು, ಈಗ ಮೊಬೈಲ್ ತಪಾಸಣಾ ವ್ಯಾನ್ ಮೂಲಕ ಸೇವೆ ಮುಂದುವರಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಹಾಗೂ ನೆರೆ ಆಂಧ್ರ, ತೆಲಂಗಾಣ, ಮಹಾರಾಷ್ಟ್ರಗಳಿಗೂ ಅವರು ಸೇವೆ ವಿಸ್ತರಿಸಿದ್ದಾರೆ. ಚರ್ಮರೋಗ, ರಕ್ತದೊತ್ತಡ, ಮಧುಮೇಹ, ಥೈರಾಯ್ಡ್, ಇರುಳುಗಣ್ಣು, ಅತಿಸಾರ, ಪಿತ್ತ ಮುಂತಾದ ತೊಂದರೆಗಳಿಗೆ ಔಷಧೋಪಚಾರ ನೀಡಬಲ್ಲರು.
‘ಕೇವಲ ನಾಡಿ ಮಿಡಿತದಿಂದ ರೋಗ ಪತ್ತೆ ಮಾಡುವುದು ನನ್ನ ಕೌಶಲ. ಮುಂಚಿತವಾಗಿಯೇ ನಾಡಿ ಪರೀಕ್ಷೆ ಮಾಡಿಸಿಕೊಂಡರೆ ಹೃದಯಾಘಾತ, ಕಿಡ್ನಿ ತೊಂದರೆ, ಚರ್ಮರೋಗ, ಕ್ಯಾನ್ಸರ್ ಮುಂತಾದ ಮಾರಿಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಪ್ರತಿಯೊಬ್ಬರ ದೈಹಿಕ ಲಕ್ಷಣ, ಊಟ, ಉಪಚಾರ, ವಾಸಿಸುವ ಪರಿಸರ ಮುಂತಾದವು ಬೇರೆಬೇರೆ ಆಗಿರುತ್ತವೆ. ಅದರ ಪ್ರಕಾರವೇ ಆಯುರ್ವೇದದಲ್ಲಿ ಔಷಧಿ ನೀಡಲಾಗುತ್ತದೆ. ಯೋಗ, ಪ್ರಾಣಾಯಾಮ, ಪತ್ಯಾಹಾರಗಳಿಂದ ರೋಗಮುಕ್ತರಾಗಿ ಇರಬಹುದು. ಹಾಗಾಗಿ, ಈ ಕ್ಷೇತ್ರ ಉಳಿದೆಲ್ಲ ಔಷಧೋಪಚಾರಕ್ಕಿಂತ ಹೆಚ್ಚು ಪರಿಣಾಮಕಾರಿ’ ಎನ್ನುತ್ತಾರೆ ಅವರು.
-ಸಂತೋಷ ಈ. ಚಿನಗುಡಿ